"ಸ್ವಲ್ಪದರಲ್ಲಿಯೇ ಗಂಡಾಂತರದಿಂದ ಪಾರು" ಎಂಬ ಬಗ್ಗೆ ಶೈಕ್ಷಣಿಕ ಲೇಖನ
ಆಟ ಆಡುವುದೆಂದರೆ ನನಗೆ ಪಂಚಪ್ರಾಣ. ಓದುವುದಕ್ಕೆ ಕೊಡುವಷ್ಟು ಮಹತ್ವವನ್ನು ನಾವು ಕ್ರೀಡೆಗಳಿಗೂ ಕೊಡಬೇಕಲ್ಲವೇ ಏಕೆಂದರೆ ಓದು ಜ್ಞಾನವನ್ನು ಹೆಚ್ಚಿಸುವಂತೆಯೇ, ಕ್ರೀಡೆಗಳು ದೈಹಿಕ ಕ್ಷಮತೆಯನ್ನು, ಆರೋಗ್ಯವನ್ನು ವೃದ್ಧಿಸುತ್ತವೆ. ಆದ್ದರಿಂದ ಶಾಲೆಯಿಂದ ಮನೆಗೆ ಹಿಂತಿರುಗಿದ ಮೇಲೆ ಕೈ ಕಾಲು ತೊಳೆದು ಲಘು ಉಪಹಾರವನ್ನು ಸೇವಿಸಿ, ಒಂದು ಗಂಟೆ ಆಟ ಆಡುವುದರಲ್ಲಿ ಕಳೆಯುತ್ತೇನೆ.
ಒಂದು ದಿನ ನನಗೆ ಆಟವಾಡಲು ಗೆಳೆಯರಾರೂ ಸಿಗಲಿಲ್ಲ. ಅವರಿಗೆಲ್ಲಾ. ನಮ್ಮ ಶಾಲೆಯಲ್ಲಿ ಪರೀಕ್ಷೆ ಆರಂಭವಾಗುವುದಕ್ಕೆ ಇನ್ನು ಮೂರು ನಾಲ್ಕು ದಿನಗಳು ಬಾಕಿ ಇದ್ದವು. ಅವರು ಯಾರೂ ಇಲ್ಲದ್ದರಿಂದ ಒಬ್ಬನೇ ಆಡಲು ಬೇಸರವಾಗಿ ಮನೆಯ ಮುಂದೆ ಕ್ಷಣಕಾಲ ಸುಮ್ಮನೆ ಕುಳಿತೆ. ಆಗ ಅಲ್ಲಿಯೇ ನಿಲ್ಲಿಸಿದ್ದ ನಮ್ಮಣ್ಣನ 'ಸೈಕಲ್' ಕಣ್ಣಿಗೆ ಬಿತ್ತು. ನನಗೋ ಸೈಕಲ್ ತುಳಿಯಲು ಅಷ್ಟಾಗಿ ಬರುತ್ತಿರಲಿಲ್ಲ. ಒಂದೆರಡು ಸಾರಿ ನಮ್ಮಣ್ಣ ತಾನೇ ಜೊತೆಯಲ್ಲಿ ಬಂದು ಸೈಕಲ್ ಹಿಡಿದುಕೊಂಡು ತುಳಿಸಿದ್ದ. ಅಂದು ನಮ್ಮ ಕನ್ನಡ ತರಗತಿಯಲ್ಲಿ " ಹಾಡ್ತಾ ಹಾಡ್ತಾ ರಾಗ ನರು ನರಳ್ತಾ ರೋಗ " ಎಂಬ ಗಾದೆ ಮಾತನ್ನು ಹೇಳಿಕೊಟ್ಟಿದ್ದರು. ಅದು ನೆನಪಾಗುತ್ತಲೇ ನನ್ನಲ್ಲಿ ಮಿಂಚೊಂದು ಸಂಚಾರವಾಯಿತು. ನಾನು ಸೈಕಲ್ಲನ್ನು ಪ್ರತಿದಿನ ತುಳಿಯುತ್ತಿದ್ದರೆ ತಾನೇ ಬರುವುದು! ಎಂದು ಕೊಂಡು ಈವತ್ತು ಏನಾದರಾಗಲಿ ಸೈಕಲ್ ತುಳಿದೇ ತುಳಿಯುತ್ತೇನೆ ಎಂದು ನಿರ್ಧರಿಸಿ ಮೇಲೆದ್ದೆ.
ಆ ಸೈಕಲ್ ನನ್ನಣ್ಣನದ್ದು ಆದ್ದರಿಂದ ಸ್ವಲ್ಪ ಎತ್ತರವಿತ್ತು. ನಾನು ಕತ್ತರೀ ಕಾಲನ್ನು ಹಾಕಿಕೊಡು ಸೈಕಲ್ ತುಳಿಯತೊಡಗಿದೆ. ಸ್ವಲ್ಪ ಸಮಯದಲ್ಲೇ ಅದರ ಮೇಲೆ ಹಿಡಿತವನ್ನು ಸಾಧಿಸಿದಾಗ ಆನಂದವಾಯಿತು. ಉಲ್ಲಾಸದಿಂದ ಹಾಡೊಂದನ್ನು ಗುನುಗುತ್ತಾ ನಿಧಾನವಾಗಿ ತುಳಿಯತೊಡಗಿದೆ. ಐದಾರೂ ಸುತ್ತುಗಳನ್ನು ಪೂರೈಸುವಷ್ಟರಲ್ಲಿ ನನಗೆ ನನ್ನ ಮೇಲೆ ಭರವಸೆ ಮೂಡಿ, ವೇಗವನ್ನು
ಮತ್ತಷ್ಟು ಹೆಚ್ಚಿಸಿದೆ. ಸ್ವಲ್ಪ ಹೊತ್ತಿನಲ್ಲಿ ಸೂರ್ಯನು ನಿಧಾನವಾಗಿ ಪಡುವಣದಲ್ಲಿ ಮುಳುಗಲು ಆರಂಭಿಸಿದ . ಆ ಮಬ್ಬುತ್ತಲಿನಲ್ಲಿ ಅದಲ್ಲಿತ್ತೋ ಒಂದು ನಾಯಿ ಬಹುವೆಂದು ಬೊಗಳುತ್ತಾ ನನ್ನೆಡೆಗೆ ಓಡಿ ಬಂತು. ನನ್ನ ಎದೆ ಜೋರಾಗಿ ಹೊಡೆದುಕೊಳ್ಳಲಾರಂಭಿಸಿತು. ನಾನು ಸೈಕಲ್ಲಿನ ವೇಗವನ್ನು ಹೆಚ್ಚಿಸಿದೆ. ಆದರೆ ಆ ನಾಯಿ ಬೆಂಬಿಡದೆ ಭಯಂಕರವಾಗಿ ಬೊಗಳುತ್ತಾ ಸೈಕಲ್ ತುಳಿಯತ್ತಿದ್ದ ನನ್ನನ್ನು ಕಚ್ಚಲು ಅಟ್ಟಾಡಿಸಿಕೊಂಡ ಬರತೊಡಗಿತು. ನಾನು ಗಾಬರಿಯಿಂದ ಸೈಕಲ್ಲಿನ ವೇಗವನ್ನು ಮತ್ತಷ್ಟು ಹೆಚ್ಚಿಸಿದೆ. ನಾಯಿಯು ವಿಕ್ರಮನನ್ನು ಬೆಂಬಿಡದ ಬೇತಾಳದಂತೆ ನನ್ನನ್ನು ಅಟ್ಟಿಸಿಕೊಂಡು ಬರುತ್ತಲೇ ಇತ್ತು. ಇನ್ನೇನೂ ನನ್ನ ಕತೆ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ನನ್ನ ಗೆಳೆಯನೊಬ್ಬ ಆ ರಸ್ತೆಯ ತಿರುವಿನಲ್ಲಿ ಕಾಣಿಸಿಕೊಂಡ.
ಚೀರುತ್ತಾ ಬರುತ್ತಿದ್ದ ನನ್ನನ್ನು ಕಂಡು ಅಲ್ಲೇ ಬಿದ್ದಿದ್ದ ಐದಾರೂ ಕಲ್ಲುಗಳನ್ನು ಎತ್ತಿಕೊಂಡು ನಾಯಿಯೆಡೆಗೆ ಬೀರಿದ. ಅದರಲ್ಲಿನ ಕಲ್ಲೊಂದು ಅದಕ್ಕೆ ತಾಕಿತೋ ಏನೋ 'ಕುಂಯ್ಯ' ಗುಟ್ಟುತಾ ಬಾಲಮುದುರಿಕೊಂಡು ಹೊರಟು ಹೋಯಿತು.
'ಬದುಕಿದೆಯ ಬಡಜೀವವೇ' ಎನ್ನುವಂತೆ ನಾನು ದೊಡ್ಡದಾಗಿ ನಿಟ್ಟುಸಿರನ್ನು ಬಿಟ್ಟು ಸೈಕಲ್ಲಿನಿಂದ ಕೆಳಗಿಳಿದೆ. ಅವನು ನಗುತ್ತಾ ನನ್ನ ಬಳಿ ಬಂದು, "ನನಗೆ ನಾಳೆಗೆ ಒಂದು ಪೆನ್ನು ಬೇಕಾಗಿತ್ತು. ಅದಕ್ಕೆ ಅಂಗಡಿಗೆ ಹೋಗೋಣವೆಂದು ಬಂದೆ. ನಿನ್ನನ್ನು ಈ ಸ್ಥಿತಿಯಲ್ಲಿ ಕಂಡು ನನಗೂ ಸಹ ಗಾಬರಿಯಾಯಿತು ಆ ನಾಯಿ ಮೊನ್ನೆಯಷ್ಟೇ ಒಂದು ಮಗುವಿಗೆ ಕಚ್ಚಿ ಬಿಟ್ಟಿತ್ತು ಎಂದು ಹೇಳಿದ. "ನಾನು
ಸರಿಯಾದ ಸಮಯಕ್ಕೆ ಬರೆದಿದ್ದರೆ ನಿನ್ನ ಗತಿ ಅಷ್ಟೇ!" ಎಂದಾಗ ನನಗೂ ಅದು ನಿಜವೆನಿಸಿತು. ಸ್ವಲ್ಪದರಲ್ಲೇ ಒಂದು ದೊಡ್ಡ ಗಂಡಾಂತರದಿಂದ ಪಾರಾದೆ ಎಂದುಕೊಂಡು ಆ ಗೆಳೆಯನಿಗೆ ಕೃತಜ್ಞತೆಯನ್ನು ಅರ್ಪಿಸಿದೆ.